Thursday, December 11, 2014

God's CASTE

ದೇವರ ಕುಲ
ಮನುಕುಲಕೆ ಅಕಟಾ ಇದೇನು ಕುಲದ ವ್ಯಾಧಿಯೋ
ಮನು ಹೇಳಿದನೆಂದು ನಂಬಿಬಿಡುವ ರೀತಿಯೋ
ಅರಿವಿಲ್ಲವೇ ಇವರ್ಗೆ ಸರಿ ಕೇಳುವೆನು ಕೇಳಿಕೋ
ನಿನ್ನ ಮನದಲಿ...
ನೀನು ಭಜಿಪ ದೇವರೇ ಬಂದಿಹನು ಬಹುಕುಲದಲಿ
ರಾಮಚಂದ್ರನು ಪುಟ್ಟಿದನು ಕ್ಷತ್ರಿಯ ವಂಶದಲಿ
ಯದುವಂಶ ಕೃಷ್ಣನನ್ನು ಯಾವ ಕುಲದಿ ನೆನೆಯಲಿ
ವ್ಯಾಸರಿಗೆ ಕೇಳಲೇನು ಅವರಂತರ್ಜಾತಿ ತಿಳಿದಿರಲಿ
ಉತ್ಸುಕತೆ ಇಂದ...
ಲವಕುಶರು ಬೆಳದರಂತೆ ವಾಲ್ಮೀಕಿ ಆಶ್ರಮದಲಿ
ಆದರವರು ಕುಲೊಧಮರು ಹೇಗಪ್ಪಾ ನಂಬಲಿ
ಶ್ರೀನಿವಾಸಾ ...
ನಿನ್ನ ಸತಿ ಹುಟ್ಟಿನಿಂದ ಯಾರೆಂಬುದ ಅರಿಯೆವು
ಪೂರ್ವಜನ್ಮಾತಾಯಿಗಾಗಿ ಬ್ರಾಹ್ಮಣನೀ ಭುವಿಯೊಳು
ನಿನಗೆ ಹೇಗೆ ಕೊಟ್ಟರಪ್ಪಾ ಬೇರೆಜಾತಿ ಹೆಣ್ಣನು
ನಿನ್ನ ಪೂಜೆ ಮಾಡುವರು ಮರೆತಿಹರು ಇದನೆಲ್ಲನು
ನನಗಚ್ಚರಿ...
ಕೆಲ ದೇವರು ಕುಲಕೂಪದಿಂದ ಹೇಗೆ ಮೇಲಿರುವರು
ಅವರವತರಿಸಲಿಲ್ಲ ಇಲ್ಲಿ ಸದ್ಯ ಅಲ್ಲೇ ಉಳಿದರು
ಬಂದರಿಲ್ಲಿ ಬಿಡುವುದಿಲ್ಲ ಗಣಪ ಕೂಡ ನಿನ್ನನು
ನಿನ್ನ ಪೂಜಿಪ ಜನರ ಅರಿವಿಗೆ ಅಡ್ಡವೆಂತೀ ವಿಘ್ನವು
ಪ್ರಶ್ನೆಯೇ ಇಲ್ಲ...
ವೇದವಿದೆ.. ಸತ್ಯಸಂಧ ..ಗೊತಿಲ್ಲ ಬಹುಜನರಿಗೆ
ಯಾರೂ ಓದಬಹುದದನು ತಿಳಿವುದದು ಆಸಕುತರಿಗೆ
ವಿವೇಕಾನಂದರು ಹೇಳಿದುದು ತಿಳಿದಿಲ್ಲಿನ್ನೂ ಜನರಿಗೆ
ತಿಳಿಸಿದ ದಯಾನಂದರಿಗೆ ವಿಷವಿತ್ತರು ಕಣೋ ಮೆಲ್ಲಗೆ
ಇನ್ನು ಎನ್ನ ಮಾತು ಕೇಳುವರೇ ಯಕ್ಷಪ್ರಶ್ನೆ ಎನ್ನೆದುರಿಗೆ
ಜಾತಿ ನ ಜಾತಿ ...
ಪೂಜಿಸಬಾರದಿತ್ತಲ್ಲ ಬೇರೇ ಜಾತಿಯ ದೇವರ
ಕೆಟ್ಟು ಹೋಗುವುದಿಲ್ಲವೇ ದೇವರಮನೆ ಗೃಹಾಲಯ
ಎಂದೆಂದಿಕೊಂಡ ನನಗೆ ತಿಳಿದಿತೊಂದುಉತ್ತರ
ಎಲ್ಲ ದೇವರೂ ಸತ್ಯ....ಎಲ್ಲ ದೇವರೂ ಸತ್ಯ
ಹಾಗಾದರೆ...
ಹಲವು ಸತ್ಯವಿಹುದೇ ? ನೋಡು ಎಂತಿದೀ ಸೋಜಿಗ
ನಾನೇ ಬ್ರಹ್ಮಾಂಡವೆಂದವನಲ್ಲಿ ಏನಿದೇನಿ ಭೇದವು
ಪ್ರತಿ ಜೀವಿಯಲ್ಲಿರುವನು ಹುಡುಕಬೇಡಿನ್ನೆಲ್ಲಿಯೂ
ಮನವೇ...
ಹತ್ತು ಜನರಿಗೆ ಬಾಳ್ ಕೊಟ್ಟರೆ ಹೆತ್ತವರಿಗೆ ಪುಣ್ಯವು
ಹುಚ್ಚು ಭೇದಭಾವದಿಂದ ಸಿಗುವುದಿಲ್ಲ ಮೋಕ್ಷವು
ಸತ್ಯವೆರಸಿ ಬಾಳಿದಂದು ತಾರತಮ್ಯ ಮುಗಿವುದು
ಮೊದಲಾಗಲಿ ನನ್ನಿಂದ ಇದೋ ಎನ್ನ ಸಂಕಲ್ಪವು
ವಿಶ್ವಾಸದಿಂದ
೧೧-೧೨-೨೦೧೪
ಹೈದೆರಾಬಾದ್

No comments: